ಭೂಮಿ,ಮುಗಿಲು ಮತ್ತು ಮನುಷ್ಯ...

ಭೂಮಿಗೂ, ಮುಗಿಲಿಗೂ
ಮತ್ತೆ ಜಗಳ ನಡೆದಿದೆ
ಮುನಿದ ಮುಗಿಲು
ಧರೆಗಿಳಿಯದೇ ಹೋಗಿದೆ

ಭೂಮವ್ವನ ಇರಿಯುತಿಹ
ಮನುಜ ಮಕ್ಕಳ ಪ್ರತಾಪ
ಕಂಡು ಮುಗಿಲು
ತೋರಿತು ಕೋಪತಾಪ

ಭೂಮವ್ವನ ಹೆಂಗರಳು
ಮಕ್ಕಳ ಅಟ್ಟಹಾಸ ಮರೆತು
ಮುಗಿಲ ಮೇಲೆಯೇ
ನಸುಕೋಪವ ತೋರಿತು

ಬೇಸರದಿ ಮುಗಿಲು
ಮರೆಗೆ ಹೊರಟು ಹೋಯಿತು
ತಂದೆಯ ಕಾಣದೇ
ಮನಷ್ಯರ ಆಕ್ರಂಧನ ಹೆಚ್ಚಿತು

ಮಕ್ಕಳ ಅಳುವಿಗೆ
ವಸುಧೆ ಅಸಹಾಯಕವಾಯಿತು
ಮುಗಿಲ ಹೃದಯ
ಮಕ್ಕಳ ನೆನಪಾಗಿ ನೊಂದಿತು

ಮುನಿಸು ಕರಗಿ
ಮಮತೆ ಮತ್ತೆ ಮೂಡಿತು
ಕಾರ್ಮೋಡದ ದಿರಿಸು
ಧರಿಸಿ ಮುಗಿಲು ಬಂದಿತು

ವಾತ್ಸಲ್ಯದ ಹನಿಗಳ
ಸುರಿಸುತ ಮೆಲ್ಲನೆ ಧರೆಗಿಳಿಯಿತು
ಮುಗಿಲ ವಾತ್ಸಲ್ಯಕೆ
ಮಕ್ಕಳ ಬಳಗ ಹರುಷದಿ ನಲಿಯಿತು
~ಪ್ರಕಾಶ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ