ಭೈರಪ್ಪನವರ ನಾಯಿನೆರಳು


ನಾಯಿನೆರಳು ೧೯೬೮ರಲ್ಲಿ ಪ್ರಕಟವಾದ ಭೈರಪ್ಪನವರ ಕೃತಿ. ಅವರ ಕಾದಂಬರಿಗಳಲ್ಲೆ ಇದು ತೆಳುವಾದ ಕಾದಂಬರಿ ಎನ್ನಬಹುದು. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ರೀತಿ ಬಹುಜಾಣ್ಮೆಯಿಂದ ಕಥೆ ಹೆಣೆಯಲ್ಪಟ್ಟಿದೆ. ಪುನರ್ಜನ್ಮ, ಕರ್ಮಫಲ, ಪೂರ್ವಕರ್ಮ ನಮ್ಮ ನೆರಳಾಗಿ ನಾಯಿಯಂತೆ ಹಿಂಬಾಲಿಸುತ್ತದೆ ಎನ್ನುವ ಅಂಶಗಳ ಹಿನ್ನೆಲೆಯಲ್ಲಿ ಕಥಾನಕವನ್ನು ಸೃಷ್ಟಿಸಿದ್ದಾರೆ. ಭಾರತೀಯ ತತ್ವದರ್ಶನಗಳನ್ನು ಕಾದಂಬರಿಯಲ್ಲಿ ಅಳವಡಿಸಿ, ನಮ್ಮಲ್ಲಿ ಆ ಬಗ್ಗೆ ಚಿಂತನೆ ಮೂಡಿಸುವ ರೀತಿ ಬರೆಯುವುದರಲ್ಲಿ ಭೈರಪ್ಪನವರಿಗೆ ಅಗ್ರಸ್ಥಾನವನ್ನು ಕೊಡಬಹುದು. ಬಹುಶಃ ಅವರು ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ ಇದು ಸಾಧ್ಯವೆನಿಸುತ್ತದೆ. ಅವರ ವಂಶವೃಕ್ಷ, ಧರ್ಮಶ್ರೀಯಲ್ಲೂ ಭಾರತೀಯ ತತ್ವದರ್ಶನದ ಚಿಂತನೆಗಳನ್ನ ಕಂಡಿದ್ದೇನೆ.
ಗಂಗಾಪುರದ ಜೋಯಿಸರ ಮನೆಯಲ್ಲಿ ಹುಟ್ಟುವ ಕ್ಷೇತ್ರಪಾಲ, ಬೆಳೆಯುತ್ತ ನನಗಾಗಲೇ ಮದುವೆಯಾಗಿದೆ, ಮಗು ಕೂಡ ಇದೆ ಅನ್ನುತ್ತಿರುತ್ತಾನೆ. ಅವನು ಹುಟ್ಟಿದಾಗಲೇ ನಾಯಿಯೊಂದು ಆ ಮನೆ ಸೇರುತ್ತದೆ. ಆ ನಾಯಿಯೊಂದೇ ಕ್ಷೇತ್ರಪಾಲನ ಸಂಗಾತಿಯಾಗಿರುತ್ತೆ.( ಇಲ್ಲಿ ಕ್ಷೇತ್ರಪಾಲನ ಫೂರ್ವಕರ್ಮವನ್ನೆ ನಾಯಿಯನ್ನಾಗಿ ಲೇಖಕರು ಸಾಂಕೇತಿಕವಾಗಿ ಸೃಷ್ಟಿಸಿದ್ದಾರೆ ಎಂದು ನನ್ನ ಭಾವನೆ.) ಹೀಗೆ ಬೆಳೆದು ೧೮ ವರ್ಷದವನಾಗುವ ಹೊತ್ತಿಗೆ, ಜೋಗಿಹಳ್ಳಿಯ ಅಚ್ಚಯ್ಯನವರು ತೀರಿಹೋದ ತಮ್ಮ ಮಗ ವಿಶ್ವೇಶ್ವರನೆ ಕ್ಷೇತ್ರಪಾಲನಾಗಿ ಮತ್ತೆ ಹುಟ್ಟಿದ್ದಾನೆ ಎಂದು ತಿಳಿದು ಗಂಗಾಪುರಕ್ಕೆ ಬರುತ್ತಾರೆ. ಯಾವತ್ತೂ ನೋಡದಿದ್ದರೂ ಕ್ಷೇತ್ರಪಾಲ ತನ್ನ ಪೂರ್ವದ ತಂದೆ ಅಚ್ಚಯ್ಯನವರನ್ನು, ತಾಯಿ ನಂಜಮ್ಮರನ್ನು, ಹೆಂಡತಿ ವೆಂಕಮ್ಮನವರನ್ನೂ ಹಾಗೂ ಜೋಗಿಹಳ್ಳಿಯವರನ್ನು ಗುರುತಿಸಿ ಪರಿಚಿತರಂತೆ ಬೆರೆಯುತ್ತಾನೆ. ಆಧುನಿಕ ಮನಸ್ಥಿತಿಯ ರೂಪದಂತಿರುವ ವಿಶ್ವೇಶ್ವರನ ಮಗ ಅಚ್ಯುತ ತನ್ನಷ್ಟೆ ವಯಸ್ಸಿನವನನ್ನು ತಂದೆಯಾಗಿ ಒಪ್ಪುವುದಿಲ್ಲ, ಅವನ ಮನಸ್ಸು ಆಧುನಿಕತೆಯ ಮತ್ತು ಪುರಾತನ ನಂಬಿಕೆಗಳ ಸಂಘರ್ಷವಾಗಿ ಚಿತ್ರಿತವಾಗಿದೆ. ಕ್ಷೇತ್ರಪಾಲನಾಗಿ ವಿಶ್ವೇಶ್ವರ ಹೇಗೆ ಹುಟ್ಟಿದ? ವಿಶ್ವೇಶ್ವರನ ಅಕಾಲ ಮೃತ್ಯು ಹೇಗಾಯಿತು? ಅಚ್ಚಣ್ಣಯ್ಯನವರಿಗೆ ವಿಶ್ವೇಶ್ವರ ಹುಟ್ಟಿದ ಕತೆ, ಮತ್ತು ಅಚ್ಚಣ್ಣಯ್ಯರು ಮಾಡಿದ ತಪ್ಪೇನು ಎಂಬುವುದನ್ನು ಓದಿ ತಿಳಿದರೆ ಚೆನ್ನ.
ಈ ಮೊದಲೆ ಹೇಳಿದಂತೆ ನಾಯಿಯನ್ನು ಪೂರ್ವಕರ್ಮಗಳ ಸಂಕೇತವಾಗಿ ತೋರಿಸುತ್ತದೆ ಎನ್ನುವ ಭಾವನೆಗೆ ಪುಷ್ಟಿ ನೀಡುವಂತೆ ನಾಯಿ ಸಾಯುವಾಗ ವಿಶ್ವೇಶ್ವರ(ಕ್ಷೇತ್ರಪಾಲ) ಯಾತನೆಯ ಮುಖಭಾವ ಹೊಂದುತ್ತಾನೆ, ಸತ್ತಮೇಲೆ ವಿಕಾರವಾಗಿ ನಕ್ಕು ನೆಮ್ಮದಿಯ ಭಾವ ತೋರುತ್ತಾನೆ. ಕಾದಂಬರಿಯಲ್ಲಿನ ಸಣ್ಣ ಪಾತ್ರವಾದ ಪ್ರೋ.ರಾಸ್ ಎಂಬ ಬ್ರಿಟಿಷ್ ಪ್ರೊಫೆಸರ್ ಪಾತ್ರ ಹಿಂದೂಧರ್ಮದ ಪುನರ್ಜನ್ಮ ಮೌಢ್ಯ ಬಿತ್ತುತ್ತಿದೆ ಎನ್ನುತ್ತಾ, ಏಸು ಹುಟ್ಟಿದ್ದು ಕುಮಾರಿ ಮೇರಿಗೆ, ಕ್ರಿಸ್ತಧರ್ಮ ವೈಜ್ಞಾನಿಕವಾದ ಧರ್ಮ ಎಂದು ಹೇಳುವುದು, ಪಾಶ್ಚಾತ್ಯರ ದ್ವಂದ್ವವನ್ನು ತೋರಿಸುತ್ತದೆ.
ಒಟ್ಟಾರೆ ಕಾದಂಬರಿಯನ್ನು ಓದಿ ಮುಗಿಸುವಾಗ, ಪುನರ್ಜನ್ಮ, ವಿಧವಾ ವಿವಾಹ, ಕರ್ಮಸಿದ್ದಾಂತ ಮುಂತಾದ ವಿಚಾರಗಳ ಬಗ್ಗೆ ಚಿಂತಿಸುವಂತಾಗುತ್ತದೆ

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ